ಪುತಿನ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಇವರು ಮಂಡ್ಯ ಜಿಲ್ಲೆಯ ಮೇಲುಕೋಟೆಯವರು. ಕನ್ನಡ ವಿಶ್ವಕೋಶದ ಭಾಷಾಂತಕಾರರಾಗಿ, ಮೈಸೂರು ವಿಶ್ವವಿದ್ಯಾನಿಲಯ ಇಂಗ್ಲಿಷ್ – ಕನ್ನಡ ನಿಘಂಟು ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಪು. ತಿ. ನ ಅವರು ಗೀತ ನಾಟಕ ,ಕವಿತೆ ,ಸಣ್ಣ ಕಥೆ, ಪ್ರಬಂಧ, ವಿಚಾರ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಗೀತ ನಾಟಕ ಇವರ ಪ್ರಾತಿನಿಧಿಕ ಪ್ರಕಾರ . ಅಹಲ್ಯೆ , ಗೋಕುಲ ನಿರ್ಗಮನ, ಶಬರಿ ,ವಿಕಟಕವಿ ವಿಜಯ,ಹಂಸ ದಮಯಂತಿ ಮತ್ತು ಇತರ ರೂಪಕಗಳು ,ಹಣತೆ, ರಸಸರಸ್ವತಿ, ಶಾರದಾಯಾಮಿನಿ, ಗಣೇಶ ದರ್ಶನ, ಶ್ರೀ ಹರಿ ಚರಿತೆ ,ರಥಸಪ್ತಮಿ ಇವರ ಪ್ರಮುಖ ಕೃತಿಗಳು. ಹಂಸ ದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀ ಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ. ಲಿಟ್ ಪದವಿ ನೀಡಿ ಗೌರವಿಸಿದೆ. ಚಿಕ್ಕಮಗಳೂರಿನಲ್ಲಿ 1981 ರಲ್ಲಿ ನಡೆದ 53ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
